Friday, December 18, 2009

ಹೆಂಡತಿ

ಮದುವೆಯಾದ ಹೊಸದರಲ್ಲಿ
ಗಂಡ ತನ್ನ ಗೆಳೆಯನಿಗೆ:ಜಿಂಕೆಮರಿ ಓಡ್ತೈತೆ ನೋಡ್ಲಾ ಮಗ
ಹಲವು ವರ್ಷಗಳ ನಂತರ
ಅಪ್ಪ ಮಗನಿಗೆ:ಆನೆಮರಿ ಬರ್ತೈತೆ ಓಡ್ಲಾ ಮಗ

Thursday, December 17, 2009

ನಿನ್ನಿಂದಲೇ

ಮದುವೆಯಾದ ಹೊಸದರಲ್ಲಿ
ಗಂಡ ಹೆಂಡತಿಗೆ: ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ.
ಕೆಲವು ವರ್ಷಗಳ ನಂತರ
ಗಂಡ ಹೆಂಡತಿಗೆ:ನಿನ್ನಿಂದಲೇ ನಿನ್ನಿಂದಲೇ ಆಫೀಸ್ ಗೆ ಲೇಟಾಗಿದೆ.

ಸ್ಕೂಲ್ ಸ್ಕೂಲ್

ಕಾರ್ ಕಾರ್ ಎಲ್ನೋಡಿ ಕಾರ್ ---ಹಾಡಿನಂತೆ

ಸ್ಕೂಲ್ ಸ್ಕೂಲ್ ಸ್ಕೂಲ್ ಸ್ಕೂಲ್ ಎಲ್ನೋಡಿ ಸ್ಕೂಲ್
ಸ್ಕೂಲ್ ಸ್ಕೂಲ್ ಸ್ಕೂಲ್ ಸ್ಕೂಲ್ ಎಲ್ನೋಡಿ ಸ್ಕೂಲ್

ಸಂದಿನಲ್ಲಿ ಗೊಂದಿನಲ್ಲಿ
ಮನೆಯಲ್ಲಿ ಶೆಡ್ ನಲ್ಲಿ
ಎಲ್ಲೆಂದ್ರಲ್ಲಲ್ಲಿ ಸ್ಕೂಲ್ ನಡೆಸ್ತಾರೋ


ಕ್ಲಾಸಲ್ಲೇ ಪ್ರೇಯರ್ ಮಾಡಿ
ರೋಡಲ್ಲೇ ಸ್ಪೋರ್ಟ್ಸ್ ನಡ್ಸಿ
ಖಾಲಿ ಸೈಟಲ್ ಪೆಂಡಾಲ್ ಹಾಕಿ
ಗ್ರಾಂಡಾಗಿ ಸ್ಕೂಲ್ ಡೆ ಮಾಡ್ತಾರೋ

ಫೀಸು ಬುಕ್ಕು ಯೂನಿಫಾರ್ಮ್
ಟೂರು ಫೈನು ಡೊನೇಶನ್ನಂತ
ಸಖತ್ತಾಗಿ ದುಡ್ಡು ಕೀಳ್ತಾರೋ

ಸ್ಕೂಲ್ ನಡ್ಸೊದೇನೂ ಕಷ್ಟ ಇಲ್ಲ
ವರ್ಷ ಎಲ್ಲ್ಲಾ ಪಾಠ ಮಾಡಿ
ಮಕ್ಕ್ಳಿಗೇನೂ ಹೇಳ್ಕೊಡ್ಲಾರ್ದೆ
TC ಕೊಟ್ಟು ಮನೆಗೆ ಕಳಿಸ್ತಾರೋ.

Thursday, September 17, 2009

ಗಾದೆಮಾತು

ನಾನಾಗ ಪಿಯುಸಿ ಓದುತ್ತಿದ್ದೆ ಅನ್ಸುತ್ತೆ. ನನ್ನ ಅಕ್ಕನ ಮಕ್ಕಳೊಂದಿಗೆ ಕಾಂಪೌಂಡಲ್ಲಿ ಆಡ್ತಾ ಇದ್ದೆ. ಪಕ್ಕದ ಮನೆಯ ಹಿತ್ತಲಲ್ಲಿ ಬಾಳೆ ಗೊನೆ ಬಿಟ್ಟಿತ್ತು.ಅದನ್ನು ಕತ್ತರಿಸಲು ಕೆಲಸದವನು ಬಂದಿದ್ದ. ಗಿಡ ಕತ್ತರಿಸಲು ಹೋದಾಗ ಬೇಡ ಅಂದಿರಬೇಕು.ಆಗ ಅವನು ಹೇಳಿದ್ದು "ಗಾದೆ ಕೇಳಿಲ್ವಾ, ಬಾಳೆಗೆ ಒಂದೇ ಗೊನೆ. ಬಾಳೋರ್ಗೆ ಒಂದೇ ಮಾತು."ಎಂತಹ ಸುಂದರ ಗಾದೆ ಮಾತು.ಅದಕ್ಕೆ ಮುಂಚೆ ಬೇಕಾದಷ್ಟು ಗಾದೆಗಳನ್ನು ಕೇಳಿದ್ದೆ. ಆಮೇಲೂ ಕೇಳಿದೀನಿ. ಆದರೆ ಈ ಗಾದೆ ಮಾತ್ರ ನನ್ನನ್ನು ಯಾವಾಗಲೂ ಕಾಡ್ತಾನೆ ಇರುತ್ತೆ.ಬದುಕಿನಲ್ಲಿ,ನಮ್ಮ ಕೆಲಸದಲ್ಲಿ ,ನಮ್ಮ ಮಾತಿನಲ್ಲಿ ಬದ್ಧತೆಯಿರಬೇಕೆಂಬುದನ್ನು ಒಂದು ಸರಳ ಅರ್ಥಪೂರ್ಣ ವಾಕ್ಯದಲ್ಲಿ ಹೇಳಲಾಗಿದೆ.

ಗಾದೆಗಳು ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿವೆ.ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ -ಆನ್ನುವ ಗಾದೆ ಮಾಡ್ಬೇಕಾದ್ರೆ ನಮ್ಮ ಜನಪದರಿಗೆ ಎಂಥಹ ಆತ್ಮವಿಶ್ವಾಸ ಇದ್ದಿರಬೇಕು. ಆದಿಪ್ರಾಸ ಆಥವಾ ಆಂತ್ಯ ಪ್ರಾಸದಿಂದ ಒಡಗೂಡಿ ಬದುಕಿನ ಸಾರವೇ ಅಡಕವಾಗಿರುವ ಸುಂದರ ವಾಕ್ಯಗಳು ಗಾದೆಗಳು.

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ ಎಂಬಂಥ ಪದ್ಯಗಳ ಸಾಲುಗಳು ಸಹ ಗಾದೆಗಳಂತೆಯೇ ಉಪಯೋಗಿಸಲ್ಪಡುತ್ತಿವೆ.

Sunday, August 2, 2009

ಮಕ್ಕಳು

ಖಲೀಲ್ ಗಿಬ್ರಾನ್ ಕಾಲ ಜನವರಿ ೬ ೧೮೮೩ ---- ಏಪ್ರಿಲ್ ೧೦ ೧೯೩೧ ಲೆಬನೀಸ್ ಅಮೆರಿಕನ್ ಕವಿ, ಲೇಖಕ ಹಾಗೂ ಚಿತ್ರಗಾರ ಸ್ಫೂರ್ತಿಯನ್ನ ಕೊಡುವ ಬರವಣಿಗೆಯ (inspirational fiction) ಮಾದರಿಯಾಗಿರುವ The prophet ಒಂದು ಅತ್ಯುತ್ತಮ ಪುಸ್ತಕ. ಪುಸ್ತಕದಿಂದ----------- ಆಲ್ ಮುಸ್ತಫಾ ದೇವರಿಗೆ ಹಾಗೂ ಆ ನಗರದ ಜನಗಳಿಗೆ ಪ್ರಿಯವಾದ ವ್ಯಕ್ತಿ. ಅವನು ತನ್ನ ಜನ್ಮಸ್ಥಾನಕ್ಕೆ ಹಿಂದಿರುಗಲು ಹೊರಟಾಗ, ಅಗಲಿಕೆಯ ನೋವನ್ನು ಅನುಭವಿಸುವ ಜನರು ವಿವಿಧ ವಿಚಾರಗಳ ಬಗ್ಗೆ ತಿಳಿಸಲು ಕೇಳುತ್ತಾರೆ.ಶ್ರೀಮಂತನೊಬ್ಬ ಕೊಡುವುದರ ಬಗ್ಗೆ ಕೇಳುತ್ತಾನೆ. ಹೋಟೆಲಿನ ಮಾಲೀಕನೊಬ್ಬ ತಿನ್ನುವುದು ಕುಡಿಯುವುದರ ಬಗ್ಗೆ, ರೈತನೊಬ್ಬ ಕೆಲಸದ ಬಗ್ಗೆ, ಮೇಸ್ತ್ರಿ ಮನೆಗಳ ಬಗ್ಗೆ, ನ್ಯಾಯಾಧೀಶ crime and punishment ಬಗ್ಗೆ , ಶಾಂತಿ, ಸುಖ ದುಃಖ ಇನ್ನಿತರ ತಮ್ಮನ್ನು ಕಾಡುವ ವಿಚಾರಗಳ ಬಗ್ಗೆ ಮಾತನಾಡಲು ಹೇಳುತ್ತಾರೆ. ಅವನು ಪ್ರತಿಯೊಂದರ ವಿಚಾರವಾಗಿಯೂ ಹೇಳುತ್ತಾ ಹೋಗುತ್ತಾನೆ. ಆಗ ಪುಟ್ಟಮಗುವನ್ನು ಎದೆಗೊತ್ತಿಕೊಂಡಿದ್ದ ತಾಯಿಯೊಬ್ಬಳು ಮಕ್ಕಳ ಬಗ್ಗೆ ಮಾತನಾಡಲು ಹೇಳುತ್ತಾಳೆ.ಮಕ್ಕಳ ಬಗ್ಗೆ ಅವನಾಡುವ ನುಡಿಗಳು ಪ್ರತಿಯೊಬ್ಬ ತಾಯಿ ತಂದೆಯರು ಹಾಗೂ ಶಿಕ್ಷಕರು ಓದಲೇಬೇಕಾದದ್ದು. ನಿಮ್ಮ ಮಕ್ಕಳು ನಿಮ್ಮವರಲ್ಲ. ಅವರು ಜೀವನದ ಪ್ರತೀಕ್ಷೆಯ ಫಲಗಳು. ಅವರು ನಿಮ್ಮ ಮೂಲಕ ಬರುತ್ತಾರೆ, ನಿಮ್ಮಿಂದಲ್ಲ.ನಿಮ್ಮ ಜೊತೆಗಿದ್ದರೂ ಅವರು ನಿಮ್ಮವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ಕೊಡಬಹುದು. ನಿಮ್ಮ ಆಲೋಚನೆಗಳನ್ನಲ್ಲ.ಯಾಕೆಂದರೆ ಅವರಿಗೆ ತಮ್ಮದೇ ಆದ ಆಲೋಚನೆಳಿರುತ್ತವೆ. ನೀವು ಅವರ ದೇಹಕ್ಕೆ ಆಶ್ರಯದಾತರು, ಅವರಆತ್ಮಕ್ಕಲ್ಲ.ಯಾಕೆಂದರೆ ಅವರ ಆತ್ಮಗಳು ನೀವು ಕನಸಿನಲ್ಲೂ ಭೇಟಿ ಕೊಡಲಾಗದ ನಾಳೆಗಳಲ್ಲಿ ವಾಸಿಸುತ್ತಿರುತ್ತವೆ. ನೀವು ಅವರಂತಾಗಲು ಪ್ರಯತ್ನ ಪಡಬಹುದು. ಆದರೆ ಅವರನ್ನು ನಿಮ್ಮಂತಾಗಿಸಲು ಯತ್ನಿಸದಿರಿ. ಯಾಕೆಂದರೆ ಜೀವನ ಹಿಮ್ಮುಖವಾಗಿ ಚಲಿಸುವುದೂ ಇಲ್ಲ, ನೆನ್ನೆಯೊಂದಿಗೆ ಅಂಟಿಕೊಂದಿರುವುದೂ ಇಲ್ಲ. ನೀವು ಬಿಲ್ಲುಗಳು. ನಿಮ್ಮ ಮೂಲಕ ಆ ಬಿಲ್ಲುಗಾರ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಕ್ಕಳು. ನಾಳಿನ ಹಾದಿಯಲ್ಲಿ ಗುರಿಯಿಟ್ಟು, ನಿಮ್ಮನ್ನು ತನ್ನ ಅಪಾರ ಶಕ್ತಿಯಿಂದ ಬಗ್ಗಿಸಿ, ಆ ಬಿಲ್ಲುಗಾರ ಬಾಣಗಳು ವೇಗವಾಗಿ ಅತಿ ದೂರದ ಗುರಿ ತಲುಪುವಂತೆ ಮಾಡುತ್ತಾನೆ. ಆ ಬಿಲ್ಲುಗಾರನ ಕೈಯಲ್ಲೇ ಬಗ್ಗಿದ್ದರಲ್ಲೇ ನಿಮ್ಮ ಸಾರ್ಥಕ್ಯವಿದೆ. ಯಾಕೆಂದರೆ ಆ ಬಿಲ್ಗಾರ ಚಲಿಸುವ ಬಾಣಗಳನ್ನು ಪ್ರೀತಿಸುವಂತೆಯೇ ಅಚಲವಾದ ಬಿಲ್ಲನ್ನೂ ಸಹ ಪ್ರೀತಿಸುತ್ತಾನೆ. ಅನುವಾದದಲ್ಲಿ ನನ್ನ ಮೊದಲ ಪ್ರಯತ್ನ. ನಿಮ್ಮ ಅಭಿಪ್ರಾಯ ತಿಳಿಸಿ. ಇದನ್ನು ಓದಿ ಯಾರಿಗಾದರೂ ಮೂಲ ಪುಸ್ತಕ ಓದಬೇಕೆನಿಸಿದರೆ ನನ್ನ ಪ್ರಯತ್ನ ಸಾರ್ಥಕ.

ನೆನಪಿನ ಜಾತ್ರೆ

ಇವತ್ತು friendship day. ನನ್ನ ಮಗ friendship band ತಂದು ಅವನ ಗೆಳೆಯ ಗೆಳತಿಯರಿಗೆಲ್ಲಾ ಕಟ್ಟಿ ಸಂಭ್ರಮ ಪದುತ್ತಿದ್ದಾಗ ನನ್ನ ಮನ ಬಾಲ್ಯಕ್ಕೆ ಓಡಿತು. ನನ್ನ ಮೊದಲ ಗೆಳತಿ ದೇವಿಯ ನೆನಪಾಯಿತು. ಅವಳು ನನಗಿಂತಾ ದೊಡ್ಡವಳು. ಒಂಥರಾ ನನ್ನ gaurdian angel. ಶಾಲೆಯಲ್ಲಿ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದೆ. ಅವಳು ಊರು ಬಿಟ್ಟು ಹೋದದ್ದೇ ನನ್ನ ಮೊದಲ ಅಗಲಿಕೆಯ ಅನುಭವ. ಅಳುತ್ತಾ ನಿಂತಿದ್ದ ನನಗೆ ಅವಳಿಗೆಂದು ಇಟ್ಟುಕೊಂಡಿದ್ದ ಪೂರ್ಣ ಕಳಿತ ಬಾಳೆಹಣ್ಣು ಕೊಟ್ಟು ಸಮಾಧಾನ ಮಾಡಿದ ನೆನಪು ಸದಾ ಹಸಿರು.ಹೆಸರಿಗೆ ತಕ್ಕಂತೆ ತುಂಬುಗೂದಲಿನ ಕೃಷ್ಣವೇಣಿ, ಅಕ್ಕನಿಗೆ ಹೆದರಿ (ಅವರಕ್ಕ ನಮ್ಮಕ್ಕ ಠೂ ಬಿಟ್ಟಿದ್ದರು) ಒಮ್ಮೊಮ್ಮೆ ಮಾತ್ರ ಆಡಲು ಬರುತ್ತಿದ್ದ ಕಲಾ ಗಾಳಿಪಟ ಮಾದಿಕೊಡುತ್ತಿದ್ದ ಮಲ್ಲೇಶ, ಜೊತೆಯಲ್ಲಿ ಆನೇಕಲ್ಲು ಆಡುತ್ತಿದ್ದ ಸಲ್ಮಾ, ಶಾಲೆಯಲ್ಲಿ ರ್ಯಾಂಕ್ ಗೆ ಪೈಪೋಟಿ ಮಾಡುತ್ತಿದ್ದ ಆನಂದ , ನಾಗರಾಜ, ಜಾರುಬಂಡೆಯಿಂದ ಬೀಳಿಸಿದ ನಂದ, ಕುಂಟೆಬಿಲ್ಲೆಯಲ್ಲಿ ಸದಾ ಸೋಲುತ್ತಿದ್ದ ವಿಜಿ, ಪಾರ್ವತಿ ಎಷ್ಟೊಂದು ಗೆಳೆಯರು ಎಷ್ಟೊಂದು ನೆನಪುಗಳು. ನನ್ನ ಬಾಲ್ಯವನ್ನು ಚಿರಸ್ಮರಣೀಯವಾಗಿ ಮಾಡಿದ ಈ ಎಲ್ಲ ಗೆಳೆಯರಿಗೆ ನನ್ನ ಧನ್ಯವಾದಗಳು. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

Saturday, January 24, 2009

ವನಸುಮ

ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ-ಹೇ ದೇವ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ
ಸುಫಲ ಸುಮ ಭರಿತ ಪಾ
ದಪದಂತೆ ನೈಜಮಾದೊಳ್ಪಿಂ ಬಾಳ್ವವೊಲು
ಡಿ.ವಿ.ಜಿ.


ಇದು ನನಗಿಷ್ಟವಾದ ಡಿ.ವಿ.ಜಿ. ಯವರ ಪದ್ಯ..ಕಾಡುಮಲ್ಲಿಗೆಯಂತೆ, ಸುವಾಸನೆಯನ್ನು ಮಾತ್ರ ಆನಂದಿಸುವಂತೆ ಜಗಕ್ಕೆ ಕೊಟ್ಟು ತಾನು ಮರೆಯಲ್ಲಿರಬೇಕೆನ್ನುವುದು ಕವಿತೆಯ ಆಶಯ.ಇದನ್ನು ನನ್ನ ಬ್ಲಾಗಿನ ಅಡಿಬರಹವನ್ನಾಗಿಸಿದ್ದೇನೆ.

Friday, January 9, 2009

ಆಶಾವಾದ?

ಒಬ್ಬಳೇ ನಡೆಯುತ್ತಿದ್ದೆ. ನಡೆಯುತ್ತ ನಡೆಯುತ್ತ ನಡೆಯುತ್ತಲೇ ಇದ್ದೆ.ದೂರದಲ್ಲಿ ಬೆಳಕಿನ ಗೊಂಚಲು ಕಾಣಿಸಿತು.ಓಡಿ ಓಡಿ ಹತ್ತಿರ ಬಂದೆ. ದಿನವೂ ನನ್ನ ಕನಸಿನಲ್ಲಿ ಮೂಡಿ ಮಾಯವಾಗುತ್ತಿದ್ದ ಅರಮನೆ ಕಣ್ಣೆದುರೇ ನಿಂತಿತ್ತು. ಅದೇ ಭವ್ಯತೆ. ಬೆಳಕಿನರಮನೆ ಕೈಬೀಸಿ ಕರೆಯಿತು. ಮುಂದಡಿಯಿಟ್ಟೆ , ಮಹಾದ್ವಾರ ತಾನೇ ತಾನಾಗಿ ತೆರೆಯಿತು. ಆವರಣವನ್ನು ಪ್ರವೇಶಿಸಿದೆ.ಸುಂದರ ತೋಟ ಹಣತೆಯ ಬೆಳಕಿನಲ್ಲಿ ಹೊಳೆಯುತ್ತಿತ್ತು.ಆ ಗುಲಾಬಿ, ಮಲ್ಲಿಗೆ, ಸೇವಂತಿಗೆಗಳ ನಡುವೆ ಓಲಾಡುತ್ತಿದ್ದ ನನ್ನ ಕೈಯಲ್ಲಿ ಗಡಿಯಾರವಿರಲಿಲ್ಲ.ಆದರೆ ಹೂವಿನ ತೂಗಾಟಕ್ಕೆ ಎಲೆಗಳ ಬಳುಕಾಟಕ್ಕೆ ಸಂಗೀತ ನೀಡುವ ಬಳೆಗಳಿದ್ದವು.

ದಿನ,ವಾರ ತಿಂಗಳುಗಳುರುಳಿದವು.ಒಂದೊಂದೇ ಹೆಜ್ಜೆ ಇಡುತ್ತಾ, ಪ್ರತಿಯೊಂದು ಹೂವಿನ ಸೊಬಗನ್ನೂ ಮನದಲ್ಲಿ ತುಂಬಿಕೊಳುತಾ,ನಿಧಾನವಾಗಿ ಬಲು ನಿಧಾನವಾಗಿ ಮನೆಯನ್ನು ಪ್ರವೇಶಿಸಿದೆ. ಒಳಗೆಲ್ಲಾ ಕತ್ತಲೆ.ಆದರೆ ಸುಖದ ಮತ್ತಿನಲ್ಲಿದ್ದ ನನಗೆ ಅದರ ಪರಿವೆಯೇ ಇರಲಿಲ್ಲ. ಹಣತೆಯ ಬೆಳಕಿನ ಕಿರಣವೊಂದು ತೂರಿ ಬಂದು ಮೆತ್ತನೆಯ ಹಾಸಿಗೆಯ ದರ್ಶನ ಮಾಡಿಸಿತು.ನಾನು ಹಾಯಾಗಿ ನಿದ್ರಿಸಿದೆ.ಕನಸಿನಲ್ಲೆಲ್ಲಾ ಹೂಗಳು ನರ್ತನ ಮಾಡಿದವು-ಹಣತೆಯ ಬೆಳಕಿನಲ್ಲಿ. ಆದರೆ ಹಟಾತ್ತನೆ ಆ ಬೆಳಕು ಆರಿತು.ಹೂಗಳ ನಾಟ್ಯ ನಿಂತಿತು.

ನಾನು ಎದ್ದೆ .ಮೈಯಡಿಗೆ ತಣ್ಣನೆಯ ನೆಲ ಕೊರೆಯುತ್ತಿತ್ತು.ಸುಪ್ಪತ್ತಿಗೆ ಮಾಯವಾಗಿತ್ತು.ಇಲ್ಲ, ಇದು ನನ್ನ ಕನಸಿನರಮನೆಯಲ್ಲ.
ಗೋಡೆಗೆ ತಿಳಿ ಗುಲಾಬಿ ಬಣ್ಣದ ಬದಲು ರಕ್ತ ಕೆಂಪಿನ ಬಣ್ಣ. ಶುಭ್ರವಾಗಿ ಹೊಳೆಯುತ್ತಿದ್ದ ನೆಲದ ಬದಲು ಧೂಳು ತುಂಬಿ ಅಲ್ಲಲ್ಲಿ ಮಸುಕಾಗಿ, ಕಿತ್ತುಹೋಗಿರುವ ನೆಲ. ಇಲ್ಲ-ಇದು ನಾನು ಹುಡುಕಿ ಬಂದ ಸ್ಥಳವಲ್ಲ. ಈ ಧೂಳು ತುಂಬಿದ ಪರಿಸರಕ್ಕೆ ನನ್ನ ಶುಭ್ರ ಉಡುಗೆ ಒಪ್ಪುತ್ತಿಲ್ಲ. ಇಲ್ಲಿ ಏನೋ ತಪ್ಪಾಗಿದೆ. ತಪ್ಪಿಸಿಕೊಳ್ಳಲು ಓಡಿದೆ.ಆದರೆ ಎಲ್ಲ ಕಡೆಯೂ ಗೋಡೆ ಎದುರಾಯಿತು.ಇಲ್ಲ ಇನ್ನೊಂದು ಕ್ಷಣವೂ ಅಲ್ಲಿರಲಾರೆನೆಂದು ತಪ್ಪಿಸಿಕೊಳ್ಳಲು ಬಾಗಿಲು ಹುಡುಕಿದೆ. ಸಿಗಲಿಲ್ಲ.
ಇದೇನಿದು ಎಲ್ಲಿಂದಲೋ ಬೆಳಕಿನ ಕೋಲೊಂದು ನನ್ನ ಮುಂದೆ ಕುಣಿಯುತ್ತಿದೆ.ಎಲ್ಲಿಂದ ಬಂತಿದು? ಆ ಕೋಲನ್ನೇ ಅನುಸರಿಸಿ ನೋಡಿದೆ.ಮೇಲೆ ಆ ಮನೆಯ ಮಾಡಿನಲ್ಲಿ ಬೆಳಕಿಂಡಿ ಇದೆ. ಹೌದು ನಾನು ಅಲ್ಲಿಂದ ಪಾರಾಗಬಹುದು.ಏಣಿಗಾಗಿ ಹುಡುಕಿದೆ.ಆದರೆ ಸಿಕ್ಕಿದ್ದು ಒಂದು ಪೊರಕೆ, ಒರಸುವ ಬಟ್ಟೆ, ಒಂದು ಡಬ್ಬ ಬಣ್ಣ ಮತ್ತು ಕುಂಚ.
ಪೊರಕೆಯಿಂದ ಧೂಳನ್ನು ಗುಡಿಸಿದೆ. ಬಟ್ಟೆಯಿಂದ ಒರೆಸಿದೆ. ನೆಲ ಕನ್ನಡಿಯಂತಾಗದಿದ್ದರೂ ಅಡ್ಡಿಯಿಲ್ಲ ಎನ್ನಿಸಿತು. ಕುಂಚವನ್ನು ಬಣ್ಣದಲ್ಲಿ ಅದ್ದಿ ಏಣಿಯನ್ನು ಬಿಡಿಸತೊಡಗಿದೆ. ಒಂದರ ಮೇಲೊಂದು ಪದರ ಬಣ್ಣ ಬಳಿದು ಅದು ಗಟ್ಟಿಯಾದ ನಂತರ ಅದನ್ನು ಏರಿ ಬೆಳಕಿಂಡಿಯಿಂದ ಬೆಳಕಿನ ಪ್ರಪಂಚಕ್ಕೆ ಕಾಲಿಡುತ್ತೇನೆ.
ನಾನು ಒಬ್ಬಂಟಿ. ನನಗೆ batman supermanಗಳ ಸಹಾಯವಿಲ್ಲ. ಆದರೂ ನೂರು, ಸಾವಿರ, ಲಕ್ಷ , ಕೋಟಿ ವರ್ಷಗಳಾದರೂ ಸಹ ನಾನು ಹೊರಗೆ ಬಂದೇ ಬರುತ್ತೇನೆ. ಇದು ಸತ್ಯ.

Thursday, January 8, 2009

ಯಾರು ಕರೆದರು ನಿನ್ನ
ಓ ನನ್ನ ಅಕ್ಕ
ಮಗುವಿನ ನಗುವು ಬೇಕಾಗಲಿಲ್ಲವೆ
ತಂದೆ ತಾಯಿಯರ ನೆನಹು ಸುಳಿಯಲಿಲ್ಲವೆ
ಪತಿಯ ಸಾಮೀಪ್ಯ ಸಾಕಾಯಿತೆ
ಜೀವನದ ಪಯಣದ ನಿಲ್ದಾಣವು
ಮೊದಲು ಹತ್ತಿದವರಿಗಿಂತ ಬೇಗನೆ ಸಿಕ್ಕಿತೆ
ನಿನ್ನ ಬದುಕು ಬೇರೆಲ್ಲೊ ಚಿಗುರಿತೆ
ಹಳೆಯ ಬದುಕಿನ ನಾವು
ಹೊಸ ಬದುಕಿನ ಕನಸಿನಲ್ಲಿ ಕಾಣುವುದಿಲ್ಲವೆ
ಕಂಡು ಕಾಡುವುದಿಲ್ಲವೆ

ಅಗಲಿಕೆ

ಮನಸ್ಸಿನ ಓಟ ಎಷ್ಟು ವಿಚಿತ್ರ.ಭೂಮಿಯ ಮೇಲಿದ್ದದ್ದು ಒಂದೇ ಕ್ಷಣದಲ್ಲಿ ಆಕಾಶವನ್ನು ಮುಟ್ಟುತ್ತದೆ.ಅಷ್ಟೇ ಬೇಗ ಪಾತಾಳವನ್ನು ಸಹ
ತಲುಪುತ್ತದೆ.ಸಾವು ನೋವುಗಳು ಈ ಜೀವನದ ಅಂಗವೇನೋ ಹೌದು.ಆದರೂ ಆತ್ಮೀಯರ ಅಗಲಿಕೆ ಸಹಿಸಲಸಾಧ್ಯ.ಮತ್ತೆ ಯಾವುದೋ ಜನ್ಮದಲ್ಲಿ,ಯಾವುದೋ ಮುಹೂರ್ತದಲ್ಲಿ ನಾವು ಮತ್ತೆ ಸಂಧಿಸಿದರೂ ಸಹ ಅವರನ್ನು ಗುರುತಿಸಲು ಸಾಧ್ಯವೇ?

Monday, January 5, 2009

ಹೀಗೊಂದು ಸಂಭಾಷಣೆ

ದಿನಾಂಕ ೧-೧-೦೯ ಸಮಯ ರಾತ್ರಿ ಹತ್ತೂವರೆ
ಅಮ್ಮ: ರಜ ಮುಗಿದೇಹೋಯ್ತು ಒಂದು ದಿನಾನೂ ಓದಿಕೊಳ್ಳಲೇ ಇಲ್ಲ.
ಮಗ:ಅದು ಹೋದ್ವರ್ಷದ ವಿಷಯ ಮರೆತ್ಬಿಡಬೇಕು. ಹೊಸ ನೆನಪು ಇಟ್ಕೊಬೇಕು.
ಅಮ್ಮ: ಹಂಗಂದ್ರೇನೋ ನಾನು ಅಮ್ಮ ನೀನು ಮಗ ಅನ್ನೋದನ್ನೂ ಮರೀಬೇಕಾ
ಮಗ: ಅಯ್ಯೋ ಹಾಗಲ್ಲಮ್ಮ ನಾವು ಛೇಂಜ್ ಆಗ್ಬೇಕು.
ಅಮ್ಮ: ಸರಿ ಇನ್ನು ನಿನ್ನ ಮುದ್ಮಾಡೋದು ಬಿಟ್ಬಿಟ್ ಹೊಡಿಯಕ್ಕೆ ಶುರು ಮಾಡ್ತೀನಿ.
ಮಗ:ಅಲ್ಲಮ್ಮ ಹಳೆ ತರ್ಲೆ ಕೆಲ್ಸಗಳನ್ನೆಲ್ಲ ಬಿಟ್ಬಿಟ್ಟು ಹೊಸ ತರ್ಲೆಕೆಲ್ಸಗಳನ್ನ ಯೋಚಿಸ್ಬೇಕು. ನೀನೂ ತುಂಬಾ ತರ್ಲೆ ಕೆಲಸ
ಮಾಡಿದೀಯಾ ಹೋದ್ವರ್ಷ ಈ ವರ್ಷನಾದ್ರೂ ಒಳ್ಳೆಯವಳಾಗು.

ಪರಿಚಯ

ನಾನು ಉದ್ಯೋಗಸ್ಠ ಗೃಹಿಣಿ
ಯಾಕೆ ಪ್ರಯೋಗ ವಿಚಿತ್ರವಾಗಿದೆಯಾ?
ನಾವೂ ಗೃಹಿಣಿಯರು ಮಾಡೋಎಲ್ಲಾ ಕೆಲ್ಸಾನೂ ಮಾಡ್ತೀವ್ರಿ.ಮಧ್ಯಾಹ್ನದ ನಿದ್ದೆ ಒಂದು ಬಿಟ್ಟು