Wednesday, July 19, 2023

ಗೆಳತಿಗೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಅತ್ತಿದ್ದೆ, ನಕ್ಕಿದ್ದೆ ನಿನ್ನ ನೋಡಿ ನಾನು ಚಿನ್ನು ಬಂದಳೆಂದು ಕುಣಿದು ಕುಪ್ಪಳಿಸಿದ್ದೆ ಶಾಲೆಯಲ್ಲಿ ಒಟ್ಟಿಗೆ ಕಲಿತಿದ್ದೆ ಕಾಗೆಯೆಂಜಲು ಮಾಡಿ ಸೀಬೇಕಾಯಿ ಕೊಟ್ಟಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಚೌಕಾಭಾರ, ಚನ್ನೆಮಣೆ, ಕಲ್ಲಾಟ, ಕುಂಟೆಬಿಲ್ಲೆ ಆಡಿದ್ದೆ ಕಪ್ಪೆಗೂಡು, ಗಾಳಿಪಟ ಕಟ್ಟಿದ್ದೆ, ಪುರಿಯಲ್ಲಿ ಅನ್ನ ಮಾಡಿ ಬಡಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಜಗಳವಾಡಿ ಠೂ ಬಿಟ್ಟಿದ್ದೆ ನನ್ನನ್ನು ಜಾರುಬಂಡೆಯಿಂದ ತಳ್ಳಿದ್ದೆ ನಿನ್ನಮ್ಮ ಕೊಟ್ಟ ತಿಂಡಿಗಳನ್ನು ಹಂಚಿಕೊಂಡಿದ್ದೆ ನೀನು ಸೋತರೂ ನನ್ನ ಗೆಲುವಿಗೆ ಸಂಭ್ರಮಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನೀನು ನೋಡಿದ ಸಿನಿಮಾ ಕತೆಯನ್ನೆಲ್ಲಾ ಹೇಳಿದ್ದೆ ನಾನು ಪೆದ್ದು ಪೆದ್ದಾಗಿ ಬರೆದ ಪದ್ಯಗಳನ್ನು ಬರೆದು ಇಟ್ಟಿದ್ದೆ ನನ್ನೊಡನೆ ಲೈಬ್ರರಿಗೆ ಬಂದಿದ್ದೆ, ಓದಿದ್ದ ಕತೆಗಳನ್ನು ಚರ್ಚಿಸಿದ್ದೆ ನನ್ನ ಕಲಿಸುವ ಕೌಶಲ್ಯವನ್ನು ಮೊದಲು ಗುರುತಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನ ವೃತ್ತಿಬದುಕಿನ ಸುಂದರ ಕ್ಷಣಗಳಲ್ಲಿ ಭಾಗಿಯಾಗಿದ್ದೆ ನನ್ನ ಮದುವೆಯಲ್ಲಿ ಲಿಪ್ ಸ್ಟಿಕ್ ಹಚ್ಚಿ ಅಲಂಕಾರ ಮಾಡಿದ್ದೆ ನನ್ನ ಮಗುವನ್ನು ನನಗಿಂತ ಮೊದಲೇ ಎತ್ತಿಕೊಂಡಿದ್ದೆ ನನ್ನ ಬದುಕು ಸದಾ ಹಸಿರಾಗಲೆಂದು ಹಾರೈಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನ ಪೀಜೇಗಳಿಗೆಲ್ಲಾ ನಕ್ಕಿದ್ದೆ, ಕೊರತೆಯಾದಾಗ ಸಾಲವನ್ನೂ ಕೊಟ್ಟಿದ್ದೆ ಒಮ್ಮೆ ಅಮ್ಮ, ಒಮ್ಮೆ ಸೋದರಿ, ಒಮ್ಮೆ ಪತಿ, ಒಮ್ಮೆ ಮಗನ ರೂಪದಲ್ಲಿ ಗೆಳೆತನದ ಸವಿಯ ಉಣಬಡಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಅತ್ತಿದ್ದೆ, ನಕ್ಕಿದ್ದೆ. ನೀನು ಕೇವಲ ಭೂತವಲ್ಲ ವರ್ತಮಾನ, ಭವಿ಼ಷ್ಯ ಸಹ ಆಗಿರುವೆ ಸದಾ ಜೊತೆಗಿರುವೆಯೆಂದು ಆಶಿಸುವೆ ಪೀಜೆ-PJ- Poor joke

Wednesday, July 5, 2023

ಪುಟ್ಟಿಯ ಬಾಲ್ಯ ಧೃವನ ಪ್ರಸಂಗ ಚಂದಮಾಮನನ್ನು ತೋರಿಸಿ ಮಗಳು ಮಗುವಿಗೆ ಊಟ ಮಾಡಿಸುತ್ತಿದ್ದಳು. ಅಮ್ಮ ಮಗನ ಸಂಭಾಷಣೆ ಕೇಳುತ್ತಾ ರತ್ನ ಬಾಲ್ಕನಿಯಲ್ಲಿ ಕೂತಿದ್ದಳು. ಮಗಳು ಮಗುವಿಗೆ ಧೃವ ನಕ್ಷತ್ರ ತೋರಿಸಿ- ಅಮ್ಮ ಧೃವನ ಕತೆ ಸ್ವಲ್ಪ ಮರೆತುಹೋಗಿದೆ, ನಿನಗೆ ನೆನಪಿದ್ದರೆ ಹೇಳು- ಅಂದಳು. ಈಗ ಪ್ರಾಣಿಗಳ ಕತೆ ಹೇಳು ಸಾಕು. ಧೃವನ ಕತೆ ಕೇಳಲು ಇನ್ನೂ ಸ್ವಲ್ಪ ದೊಡ್ಡವನಾಗಬೇಕು ಎಂದು ಹೇಳುತ್ತಾ ಅವಳು ಬಾಲ್ಯಕ್ಕೆ ಜಾರಿದಳು. ಪುಟ್ಟಿ ಮನ:ಪಟಲದ ಮೇಲೆ ಮೂಡಿದಳು. ಪುಟ್ಟಿಯ ಗೆಳತಿ ಚಿನ್ನುಗೆ ತಂಗಿ ಹುಟ್ಟಿದ್ದಳು. ಅದೇ ಸಮಯದಲ್ಲಿ ವಿಜಿಗೆ ಸಹ ತಂಗಿ ಹುಟ್ಟಿದ್ದಳು.ಕೆಂಪು ಕೆಂಪಾಗಿದ್ದಆ ಪುಟ್ಟ ಪಾಪುವನ್ನು ನೋಡಿ, ಪುಟ್ಟಿಗೂ ತಮ್ಮ ಅಥವಾ ತಂಗಿ ಬೇಕೆಂದು ಅನಿಸಿಬಿಟ್ಟಿತ್ತು. ಅಮ್ಮನನ್ನು ಕೇಳಿದಳು. ಅಮ್ಮ ನಕ್ಕುಬಿಟ್ಟರು ನಮಗೆ ನೀನೇ ಪಾಪು ಎಂದು ಮುದ್ದು ಮಾಡಿದರು. ಆಸ್ಪತ್ರೆಗೆ ಹೋಗಿ ಕೇಳಿದರೆ ಮಗು ಕೊಡ್ತಾರೆ, ಹೋಗಿ ತೊಗೊಂಡು ಬಾ ಎಂದು ಹಟ ಮಾಡುತ್ತಾ ಕುಳಿತಳು. ಅಮ್ಮ ಕ್ಯಾರೇ ಅನ್ನದೆ, ಕಸೂತಿ ಹಿಡಿದು ಕುಳಿತರು. ಚಿಕ್ಕಕ್ಕ ಅಣಕಿಸಿ ನಕ್ಕಳು. ದೊಡ್ಡಕ್ಕ ಕಡಲೆಕಾಯಿ ಬೀಜ ಕೊಟ್ಟು ಗಮನ ಬೇರೆಡೆಗೆ ಸೆಳೆದಳು. ಶಾಲೆಗೆ ಹೋಗಿದ್ದ ಮೇನೇಜರ್ ಮಕ್ಕಳೆಲ್ಲ ಮನೆಗೆ ಬಂದರು. ಅವರ ಅಪ್ಪ ಅಮ್ಮ ಯಾವುದೋ ಕೆಲಸದ ಮೇಲೆ ದೂರದ ಊರಿಗೆ ಹೋಗಿದ್ದರಿಂದ ಅವರೆಲ್ಲಾ ಪುಟ್ಟಿಯ ಮನೆಯಲ್ಲೇ ತಂಗಿದ್ದರು. ಸಂಜೆಯಾಯಿತು. ಎಲ್ಲಾ ವಾಕಿಂಗ್ ಹೊರಟರು. ಅಮ್ಮನೂ ಜೊತೆಗೆ ಬರ್ತಿದ್ದರು ಮತ್ತು ಕತೆ ಹೇಳ್ತಿದ್ದರು. ಪುಟ್ಟಿ ಮೊದಲ ಬಾರಿಗೆ ರಾಮಾಯಣದ ಕತೆ ವಾಕಿಂಗ್ ಹೋಗುವಾಗಲೇ ಕೇಳಿದ್ದು. ಅವತ್ತು ಧೃವನ ಕತೆ ಹೇಳಿ ಧೃವ ನಕ್ಷತ್ರ ತೋರಿಸಿದರು. ಮರಣಹೊಂದಿದ ಮಹಾಪುರುಷರಲ್ಲದೆ, ಮಹಾನುಭಾವರಂತೆ ಬದುಕಿದ ತನ್ನ ತಾತಂದಿರು ಸಹ ನಕ್ಷತ್ರಗಳಾಗಿದ್ದಾರೆಂದು ಪುಟ್ಟಿಗೆ ಅವತ್ತು ಗೊತ್ತಾಯಿತು. ತಾನು ನೋಡದೇ ಇದ್ದ ತಾತಂದಿರನ್ನು ತಾರೆಗಳ ರೂಪದಲ್ಲಿ ನೋಡಿ ಆಗಾಗ ಅವರೊಂದಿಗೆ ಪುಟ್ಟಿ ಮಾತಾಡುವುದಿತ್ತು. ಧೃವ ತಂದೆಯ ಪ್ರೀತಿಗಾಗಿ ದೇವರನ್ನು ಹುಡುಕುತ್ತಾ ಹೋಗಿದ್ದು ಪುಟ್ಟಿಯ ಮನಮುಟ್ಟಿತ್ತು. ತಾನೂ ತಮ್ಮ/ತಂಗಿಗಾಗಿ ಬೇಡಲು, ದೇವರ ಭೇಟಿ ಮಾಡಲು ನಿರ್ಧರಿಸಿದಳು. ಆಗ ಕತ್ತಲೆಯಾದ್ದರಿಂದ ಭಯವಾಯಿತು. ರಾತ್ರಿ ಅದೇ ಯೋಚನೆ ಮಾಡುತ್ತಾ ಮಲಗಿದಳು. ಬೆಳಗಾಯಿತು. ಹಾಲು ಕುಡಿದು, ಹಿಪ್ಪುನೇರಳೆ ಹಣ್ಣು, ಕಾಚಿ ಹಣ್ಣು, ಒಂದು ಟೊಮೇಟೊ ಎಲ್ಲಾ ಲಂಗದಲ್ಲಿ ತುಂಬಿಕೊಂಡು ಹೊರಟಳು. ದಾರಿಯಲ್ಲಿ ಎದುರಿಗೆ ಗಡ್ಡದ ರಾಮಯ್ಯ ಬಂದರು. ಪಕ್ಕದಲ್ಲಿದ್ದ ಚಿನ್ನು ಮನೆಗೆ ನುಗ್ಗಿ ಬಾಗಿಲ ಹಿಂದೆ ಅವಿತಳು. ಇಲ್ಯಾಕೆ ನಿಂತಿದೀಯ ಪುಟ್ಟಿ ಅಂತ ಚಿನ್ನು ಅಪ್ಪ ಕೇಳಿದರು. ಯಾರೋ ಗಡ್ಡ ಬಿಟ್ಟವರು ಮನೆ ಮುಂದೆ ಹೋದ್ರೆನೋ. ಅವಳಿಗೆ ಭಯ ಅದಕ್ಕೆ ಬಚ್ಚಿಟ್ಟುಕೊಂಡಿದಾಳೆ -ಚಿನ್ನು ಅಣ್ಣ ಹೇಳಿದ. ಮನೆಗಳನ್ನೆಲ್ಲಾ ದಾಟಿ ಮಾವಿನ ತೋಪಿನ ಕಡೆ ಪುಟ್ಟಿ ಹೊರಟಳು. ಮೋರಿ ಪಕ್ಕದಲ್ಲಿ ಹಸಿರು ಹಾವೊಂದು ಸರ ಸರ ಎಂದು ಹರಿದು ಹೋಯಿತು. ಮಾವಿನ ಮರದ ಮೇಲೆ ಅಳಿಲುಗಳೆರಡು ಚಿನ್ನಾಟವಾಡುತ್ತಿದ್ದವು. ಲಂಗದಲ್ಲಿದ್ದ ಹಣ್ಣೆರಡನ್ನು ಅಳಿಲಿಗೆ ಎಸೆದಳು. ಅಳಿಲುಗಳು ತಿರುಗೂ ನೋಡಲಿಲ್ಲ. ಹಣ್ಣುಗಳು ಕೆಳಗೆ ಬಿದ್ದು ಮಣ್ಣಾಯಿತು. ಭೂಮಿಗೆ ಆಕಾಶಕ್ಕೆಂದು ಒಂದೊಂದು ಹಣ್ಣು ಎಸೆದ ಪುಟ್ಟಿ, ಉಳಿದ ಹಣ್ಣುಗಳನ್ನು ನಿಧಾನವಾಗಿ ಸವಿಯುತ್ತಾ ಸುತ್ತ ಮುತ್ತ ನೋಡಿಕೊಂದು ಹೋಗುತ್ತಿದ್ದಳು. ಬಸವನ ಹುಳವೊಂದು ಮೆಲ್ಲಗೆ ನಡೆಯುತ್ತಾ ಹೋಗುತ್ತಿತ್ತು. ಬಿಳಿ ತುಣುಕನ್ನು ಬಾಯಲ್ಲಿ ಹಿಡಿದ ಕರಿ ಇರುವೆಗಳು, ಇರುವೆ ಗೂಡಿನಿಂದ ಸಾಲಾಗಿ ಹೊರಟಿದ್ದವು. ಸುತ್ತ ಮತ್ತ ನೋಡುತ್ತಾ ಲಂಗದಲ್ಲಿದ್ದ ಹಣ್ಣು ತಿನ್ನುತ್ತಾ ಪುಟ್ಟಿ ಮುಂದೆ ಹೋದಳು. ನಾರದರು ಆಕಾಶದಿಂದ ಇಳಿಯಬಹುದೆಂದು ಮಧ್ಯೆ ಮಧ್ಯೆ ತಲೆ ಮೇಲೆತ್ತಿ ನೋಡುತ್ತಿದ್ದಳು. ನಾರದರಿಗೆ ಕೇಳಿಸಲೆಂದು ನಾರಾಯಣ ನಾರಾಯಣ ಎಂದು ಜೋರಾಗಿ ಹೇಳುತ್ತಾ ಹೋಗುತ್ತಿದ್ದಳು. ದೂರದಲ್ಲಿ ಯಾರೋ ಮಾತಾಡುವ ಸದ್ದು ಕೇಳಿಸಿತು. ಅವರು ದಾಟುವವರೆಗೆ ಮರದ ಮರೆಯಲ್ಲಿ ಅಡಗಿ ಕುಳಿತಳು. ದೇವರು ಪಾಪು ಕೊಟ್ಟರೆ ಹೇಗೆ ಕರ್ಕೊಂಡು ಹೋಗೋದು-ಯೋಚನೆ ಬಂತು. ತಾನೇ ಎತ್ತಿಕೊಂಡು ಹೋಗುವೆನೆಂದು ಅಂದುಕೊಂಡಳು. ನಾರಾಯಣ ಸ್ಮರಣೆ ನಡದೇ ಇತ್ತು. ಇನ್ನೂ ನಾರದ ಏಕೆ ಬರಲಿಲ್ಲ. ಬೇರೆ ಯಾರಿಗೋ ದಾರಿ ತೋರಿಸಲು ಹೋಗಿರಬಹುದು- ಅಂತ ಅನಿಸಿತು. ತಮ್ಮ ಸಿಗುತ್ತಾ ತಂಗಿನಾ ಒಂದ್ಸಲ ತಮ್ಮ ಇರಲಿ ಅನಿಸಿದರೆ ಇನ್ನೊಮ್ಮೆ ತಂಗಿ ಬೇಕು ಎನಿಸುತ್ತಿತ್ತು. ಕೊನೆಗೆ ಯಾವುದಾದರೂ ಸರಿ ಒಂದು ಪಾಪು ಬೇಕು ಅನಿಸಿತು. ಅಷ್ಟರಲ್ಲಿ ಸ್ನಾನ ಮಾಡಿಸಲು ಪುಟ್ಟಿಯನ್ನು ಕರೆಯಲು ಬಂದ ದೊಡ್ಡಕ್ಕನಿಗೆ ಪುಟ್ಟಿ ಹಿತ್ತಿಲಲ್ಲಿ ಕಾಣಲಿಲ್ಲ. ಮನೆಯ ಸುತ್ತ ಹುಡುಕಿದರೂ ಪುಟ್ಟಿ ಸಿಗಲಿಲ್ಲ. ಚಿನ್ನು, ವಿಜಿಗೂ ಗೊತ್ತಿರಲಿಲ್ಲ. ಅಕ್ಕಂದಿರಿಗೆ ಗಾಬರಿ ಶುರು ಆಯಿತು. ಅಣ್ಣನಿಗೆ ಹೇಳಿದರು. ಅಣ್ಣ ಸೈಕಲ್ ಹತ್ತಿ ಹುಡುಕಲು ಹೊರಟ. ದಾರಿಯಲ್ಲಿ ಯಾರೋ - ಮಾವಿನ ತೋಪಿನ ಕಡೆ ಹೋಗುವುದನ್ನು ನೋಡಿದೆ. ಮಗು ಒಂದೇ ಬಂದಿರಲ್ಲ. ನೀವು ಮುಂದೆ ಇರಬಹುದು ಅಂದುಕೊಂಡೆ –ಅಂದರು. ಅಣ್ಣ ತೋಪಿನ ಕಡೆ ಸೈಕಲ್ ತಿರುಗಿಸಿದ. ಪುಟ್ಟಿ ಗಿಣಿ ಕಚ್ಚಿ ಕೆಳಗೆ ಹಾಕಿದ ಮಾವಿನಕಾಯನ್ನು ತಿನ್ನುತ್ತಾ ನಾರಾಯಣ ಎಂದು ಹೇಳುತ್ತಾ ಹೋಗುತ್ತಿದ್ದಳು. ದೂರದಲ್ಲಿ ನರಿ ಊಳಿಡುವುದು ಕೇಳಿಸಿತು. ಭಯ ಶುರುವಾಯಿತು. ತಮ್ಮನೂ ಬೇಡ ತಂಗಿನೂ ಬೇಡ ಅನಿಸಲು ಶುರುವಾಯಿತು. ಅಷ್ಟರಲ್ಲಿ ಅಣ್ಣನ ಕರೆ ಕೇಳಿಸಿತು. ಹತ್ತಿರ ಓಡಿದಳು. ಅಣ್ಣ ಎತ್ತಿಕೊಂಡು ಬಂದು ಸೈಕಲ್ ಮೇಲೆ ಕೂರಿಸಿದ. ಪುಟ್ಟಿಯ ಸಾಹಸಗಾಥೆ ಮುಗಿಯಿತು. ಅವಳ ಕತೆ ಕೇಳಿ ನಗು ಬಂದರೂ, ಅವಳು ಕಾಣದಾದಾಗಿನ ಅನುಭವ ನೆನೆದರೆ ದೊಡ್ಡಕ್ಕನಿಗೆ ಈಗಲೂ ಮೈಮೇಲೆ ಮುಳ್ಳುಗಳೇಳುತ್ತವೆ. ಅಜ್ಜಿ- ಮೊಮ್ಮಗನ ದನಿ ಕೇಳಿ ರತ್ನ ಬಾಲ್ಯದ ರಮ್ಯಲೋಕದಿಂದ ವಾಸ್ತವಕ್ಕೆ ಮರಳಿದಳು.

Tuesday, March 14, 2023

ನನ್ನ ಎಡವಟ್ಟು ಅವತ್ತು, ನನ್ನ ಗೆಳತಿ ರಮಾ ಕೆಲಸದ ನಿಮಿತ್ತ ತನ್ನ ಪರಿಚಯದ ಪ್ರಕಾಶಕರೊಬ್ಬರ ಕಾಂಟಾಕ್ಟ್ ನಂ ಕಳಿಸಿದ್ದಳು. ಅವರ ಹೆಸರು ಪರಮೇಶ್ವರ ಅಂತ ಇಟ್ಕೊಳೋಣ. ಆಗ ಮಗ ಮನೆಯಲ್ಲಿರಲಿಲ್ಲ. ನಾನೇ ಸೇವ್ ಮಾಡಿಕೊಳ್ಳಲು ಪ್ರಯತ್ನಿಸಿದೆ. ಯಶಸ್ವಿಯೂ ಆದೆ. ಹೆಮ್ಮೆಯಿಂದ ಬೀಗಿದೆ. ಮಾರನೆಯ ದಿನ ಕಾಲೇಜ್ ಗೆಳತಿಯರ ವಾಟ್ಸಪ್ ಗ್ರೂಪಲ್ಲಿ ಪರಮೇಶ್ವರ್ ಅವರಿಂದ ಎರಡು ಮೆಸೇಜ್. ಆ ಗ್ರೂಪ್ ಗೆ ರಮಾನೇ ಅಡ್ಮಿನ್. ಈ ಯಪ್ಪನ ನಂ ನಮ್ಮ ಗ್ರೂಪಲ್ಲಿ ಯಾಕೆ ಸೇರಿಸಿದ್ದಾಳೆ ಅಂತ ರಮಾನ ಚೆನ್ನಾಗಿ ಬೈಕೊಂಡೆ. ತಕ್ಷಣ ಅವಳಿಗೆ ಕರೆ ಮಾಡಿದೆ. ವ್ಯಾಪ್ತಿ ಪ್ರದೇಶದಲ್ಲಿ ಇಲ್ಲವೆಂಬ ಸಂದೇಶ ಬಂತು. ಸಂಜೆಗೆ ಮತ್ತೆ ಎರಡು ಪರಮೇಶ್ವರ್ ಕಳಿಸಿದ ಸಂದೇಶಗಳು ಗ್ರೂಪಲ್ಲಿ. ಪರಮೇಶ್ವರ್ ಹೆಸರು ಸೇರಿಸಿದ್ದಕ್ಕೆ ಬೇರೆ ಗೆಳತಿಯರ ಪ್ರತಿಕ್ರಿಯೆ ಇರಲಿಲ್ಲ. ಮತ್ತೆ ರಮಾಗೆ ಕರೆ ಮಾಡಿದೆ. ಅವಳು ಫೋನ್ ತೆಗೆದ ತಕ್ಷಣ ಚೆನ್ನಾಗಿ ಬೈದೆ. ತಾಳು ತಾಳು ಏನಾಗಿದೆಯೇ ನಿನಗೆ ಅಂದಳು ರಮಾ. ನಾನು ಪರಮೇಶ್ವರನ್ನ ನಮ್ಮ ಗ್ರೂಪ್ ಗೆ ಯಾಕೆ ಸೇರಿಸಿದ್ದೀಯ ಅಂತ ಜೋರು ಮಾಡಿದೆ. ಅವಳು ಇಲ್ಲ ಅಂದಳು. ನೋಡು ಎರಡು ಪೋಸ್ಟ್ ಇದೆ. ಅದರಲ್ಲಿ ಒಂದು ಹಕ್ಕಿಗಳದು ಅಂದೆ. ಅವಳು ಅದು ನಾನೇ ಕಳಿಸಿದ್ದು ಅಂದಳು. ನನ್ನ ಪೋನಿನಲ್ಲಿ ಪರಮೇಶ್ವರ್ ಅಂತ ಬಂದಿದೆ. ಅವಳ ಫೋನಲ್ಲಿ ಪರಮೇಶ್ವರ್ ಗ್ರೂಪಲ್ಲಿ ಇಲ್ಲ. ರಮಾ ಕಳಿಸಿದ ಮೆಸೇಜ್ ಪರಮೇಶ್ವರ್ ಹೆಸರಲ್ಲಿ ಹೇಗೆ ಬಂತು. ಚಿದಂಬರ ರಹಸ್ಯವಾಯಿತು. ಮಗ ಚೆಕ್ ಮಾಡಿದಾಗ ಗೊತ್ತಾಯ್ತು ರಮಾ ನಂಬರ್ ನ ವಾಟ್ಸಪ್ ನಲ್ಲಿ ಪರಮೇಶ್ವರ್ ಹೆಸರಲ್ಲಿ ಸೇವ್ ಮಾಡಿಬಿಟ್ಟಿದ್ದೆ.

Monday, November 14, 2022

ಪುಟಾಣಿ ಮಕ್ಕಳ Bed Time ಕಥೆಗಳು

ನನ್ನ ಹೊಸ ಪ್ರಯತ್ನ. ದಯವಿಟ್ಟು ನೋಡಿ ಪ್ರೊತ್ಸಾಹಿಸಿ ಗಣೇಶನಿಗೆ ಬಸ್ಕಿ ಹೊಡ್ಯೋದ್ಯಾಕೆ. ಪುಟಾಣಿ ಮಕ್ಕಳ Bed Time ಕಥೆಗಳು -1 https://youtu.be/hQiOl-4IhvY ಕರ್ಣನನ್ನೇ ಏಕೆ ದಾನಶೂರನೆಂದು ಕರೆಯುತ್ತಾರೆ?. ಪುಟಾಣಿ ಮಕ್ಕಳ Bed Time ಕಥೆಗಳು - 2 https://youtu.be/faLkrfszEX8 ಜಾಣ ನರಿ ಮೊಸಳೆಯಿಂದ ಪಾರಾಗಿದ್ದು ಹೇಗೆ ? ಪುಟಾಣಿ ಮಕ್ಕಳ Bed Time ಕಥೆಗಳು - 3 https://youtu.be/OdjjOV-7yIU

Tuesday, November 1, 2022

https://www.youtube.com/channel/UCBHp4PRL19Bg4eY6-YEMC-Q nanna you tube channel

Wednesday, October 26, 2022

ಪುಟ್ಟಿಯ ಬಾಲ್ಯ ಬೊಂಬೆ ಹಬ್ಬ ನವರಾತ್ರಿ ಬಂತು. ಬೊಂಬೆ ಜೋಡಿಸಬೇಕು. ಹೆಣ್ಣು ಮಕ್ಕಳು ಮದುವೆ ಮಾಡಿಕೊಂಡು ಹೋಗಿದಾರೆ. ಮಗನಿಗೆ ಕೆಲಸ. ಯಜಮಾನರೊಂದಿಗೆ ಕಾರ್ಡ್ ಬೋರ್ಡ್ ಬಾಕ್ಸಿನಿಂದ ಬೊಂಬೆ ತೆಗೆದು ಜೋಡಿಸುತ್ತಿದ್ದ ರತ್ನಳ ಮನ ಬಾಲ್ಯಕ್ಕೋಡಿತು. ಬೆಳ್ಳಿಯಂತೆ ಹೊಳೆಯುವ ಜರಿಯ ಬಾರ್ಡರ್ ಇದ್ದ ಆಕಾಶ ನೀಲಿ ಬಣ್ಣದ ಸ್ಕರ್ಟ್, ಪಫ್ ತೋಳಿನ ಬಿಳಿ ರವಿಕೆ ತೊಟ್ಟು ಹಾಲಿನ ಮಧ್ಯದಲ್ಲಿದ್ದ ದೊಡ್ಡ ಕರಿ ಪೆಟ್ಟಿಗೆಯ ಪಕ್ಕ ಕುಳಿತ ಪುಟ್ಟಿ ಅದರಲ್ಲಿದ್ದ ಬೊಂಬೆಗಳನ್ನು ಮುಟ್ಟಲು ಹಾತೊರೆಯುತ್ತಿದ್ದಳು. ಪೆಟ್ಟಿಗೆಯ ಒಂದು ಬದಿಯಲ್ಲಿ ಮುಚ್ಚಳವಿದ್ದ ಖಾನೆ. ಅದರಲ್ಲಿ ಮಣಿಸರಗಳು, ಶೆಟ್ಟಿಯ ಬಳೆ ಮಲ್ಹಾರ, ಓಲೆ ಝುಮುಕಿಗಳು ಮಣಿಗಳಿಂದ ಮಾಡಿದ ಬಳೆಗಳು ಇತರ ಅಲಂಕಾರದ ವಸ್ತುಗಳು ಇದ್ದವು. ಅಮ್ಮ ಒಂದೊಂದೇ ಬೊಂಬೆಯನ್ನು ನಾಜೂಕಾಗಿ ತೆಗೆದಿರಿಸುತ್ತಿದ್ದಾರೆ. ಅಜ್ಜಿ ಬೊಂಬೆಗಳನ್ನು ತಿರುಗಿಸಿ ನೋಡಿ, ಯಾವುದಕ್ಕೆ ಅಲಂಕಾರ ಬೇಕೆಂದು ಹೇಳುತ್ತಿದ್ದರೆ. ಚಿಕ್ಕಕ್ಕ ದೊಡ್ಡಕ್ಕ ಇಬ್ಬರೂ ಸೂಜಿ ದಾರ, ಬಣ್ಣದ ಕಾಗದ ಗೋಂದು, ನಕ್ಕಿ ಎಲ್ಲಾ ಇಟ್ಟುಕೊಂಡು ಬೊಂಬೆಯ ಅಲಂಕಾರಕ್ಕೆ ಸಿದ್ಧರಾಗಿದ್ದಾರೆ. ಪುಟ್ಟಿ ತಾನು ದಿನಾ ಆಡುತ್ತಿದ್ದ ಕೈ ಮುರಿದ ಬೆತ್ತಲೆ ಬೊಂಬೆ ಇಟ್ಟುಕೊಂಡು, ತನ್ನ ಬೊಂಬೆಗೆ ಫಸ್ಟ್ ಡ್ರೆಸ್ ಮಾಡು ಅಂತ ಕಾಡುತ್ತಿದ್ದಾಳೆ. ಅಕ್ಕ ಒಂದು ಜೋಡಿ ಬೊಂಬೆಗೆ ಪುಟ್ಟಿಗೆ ಹೊಲಿದು ಮಿಕ್ಕಿದ್ದ ಬಟ್ಟೆಯಲ್ಲಿ ಪಂಜಾಬಿ ಡ್ರೆಸ್ ಹೊಲೆದಳು. ಬೊಂಬೆಗೆ ಸಾಂಪ್ರದಾಯಿಕವಾಗಿ ಸೀರೆ ಉಡಿಸಿದರೇನೆ ಚಂದ ಅಂತ ಅಜ್ಜಿಯ ಅನಿಸಿಕೆ. ಹೊಸದಾಗಿ ಹೊಲಿಯಕ್ಕೆ ಕಲಿತಿದಾಳೆ ಇರ್ಲಿ ಬಿಡಿ, ಹೇಗೂ ಉಳಿದ ಜೋಡಿಗಳಿಗೆಲ್ಲಾ ಸೀರೆನೇ ಉಡಿಸಿದೆಯಲ್ಲಾ- ಅಮ್ಮನ ಸಪೋರ್ಟ್. ಪಂಜಾಬಿ ಡ್ರೆಸ್ ಹಾಕಿದ್ದ ಜೋಡಿಯನ್ನು ತೋರಿಸಿ ನೀನು ನಿನ್ನ ಗಂಡ ಅಂತ ಚಿಕ್ಕಕ್ಕ ಪುಟ್ಟಿಯನ್ನು ರೇಗಿಸಿದಳು. ಅದು ನಾನಲ್ಲ- ಪುಟ್ಟಿ ಮುಖ ಊದಿಸಿದಳು. ನೋಡು ನೋಡು ಬಟ್ಟೆನೂ ನಿಂದೆ ಬಣ್ಣಾನೂ ನಿಂದೆ. ಉತ್ತರ ಕೊಡಲು ಹೊರಟ ಪುಟ್ಟಿಯ ಗಮನ ಬಟ್ಟೆಯ ಬ್ಯಾಗಿಂದ ಅಮ್ಮ ತೆಗೆದ ಪಿಂಗಾಣಿ ಸಾಮಾನುಗಳ ಕಡೆ ಹೊರಳಿತು. ಹಾಲು ಬಣ್ಣದ ಟೀ ಮತ್ತು ಡಿನ್ನರ್ ಸೆಟ್, ಅದಕ್ಕೆ ಅಂಚಲ್ಲೆಲ್ಲಾ ಕೆಂಪು ಹಸಿರು ಬಣ್ಣಗಳಿಂದ ಹೂ ಬಳ್ಳಿಗಳನ್ನು ಬಿಡಿಸಲಾಗಿತ್ತು. ಮುದ್ದಾದ ನಾಯಿ ಬೆಕ್ಕು, ಆನೆ, ಕುದುರೆಗಳ ಜೋಡಿ ಬೊಂಬೆಗಳು. ನೀಲಿ ಕೆಂಪು ಬಣ್ಣದಿಂದ ಅಲಂಕೃತಗೊಂದ ಸಿಂಹ, ಅದರ ತಲೆಯ ಮೇಲಿನ ತೂತುಗಳಲ್ಲಿ ಊದುಕಡ್ಡಿ ಸಿಕ್ಕಿಸಬಹುದಿತ್ತು. ಹುಲಿ, ಸಿಂಹ, ನಾಯಿ, ಆನೆ, ಎತ್ತುಗಳ ಮಣ್ಣಿನ ಬೊಂಬೆಗಳು. ಶೆಟ್ಟಿ ಮತ್ತು ಶೆಟ್ಟಮ್ಮರ ದಢೂತಿ ಬೊಂಬೆಗಳು. ಹಿತ್ತಾಳೆಯ ಒಲೆ, ಬಾಂಡಲಿ, ಇಡ್ಲಿ ಪಾತ್ರೆ, ಚೊಂಬು, ಬಿಂದಿಗೆ ಇತರ ಅಡುಗೆಮನೆ ಸಾಮಾನುಗಳು. ಬಳಪದ ಕಲ್ಲಿನ ಮರಿಗೆ, ಒರಳು, ಅಳುಗುಳಿಮನೆ ಇತರ ಸಾಮಾನುಗಳು. ಜೊತೆಗೆ ಮನಸೂರೆಗೊಳ್ಳುವ ಚನ್ನಪಟ್ಟಣದ ಬಣ್ಣದ ಬೊಂಬೆಗಳು. ಬಾವಿ, ಹುಡುಗ, ಹುಡುಗಿ, ನೀರು ಹೊತ್ತ ಮಹಿಳೆ, ಪಾತ್ರೆಗಳು, ಒಂದೇ ಎರಡೇ ಅದೇ ಒಂದು ಸುಂದರ ಲೋಕ. ಬೊಂಬೆ ಜೋಡಿಸಿದ ಮೇಲೆ ಮುಟ್ಟಬಾರದು- ಅಮ್ಮ ಪದೇ ಪದೇ ಪುಟ್ಟಿಗೆ ಹೇಳುತ್ತಿದ್ದರು. ಸತ್ಯವಾಗ್ಲೂ ಮುಟ್ಟಲ್ಲ ಅಂತ ಪುಟ್ಟಿ ಭಾಷೆ ಕೊಟ್ಟಳು. ಮನಸ್ಸಿನಲ್ಲಿ ಸತ್ಯಕ್ಕೆ ಅ ಸೇರಿಸಿಕೊಂಡಳು. ಪುಟ್ಟಿಗೆ ಕಣ್ಣೆಳೆಯತೊಡಗಿತು. ಹೋಗಿ ಮಲಗಿದಳು. ಬೆಳಿಗ್ಗೆ ಏಳುವ ಹೊತ್ತಿಗೆ ಅಲಂಕೃತಗೊಂಡ ಬೊಂಬೆಗಳನ್ನು ಜೋಡಿಸಲಾಗಿತ್ತು. ಎಲ್ಲೆಲ್ಲಿ ಯಾವ ಯಾವ ಯಾವ ಬೊಂಬೆ ಇದೆ ಅಂತ ಪುಟ್ಟಿ ಕಣ್ಣಲ್ಲೇ ಫೋಟೋ ಕ್ಲಿಕ್ಕಿಸಿದಳು. ಇವತ್ತಿನ ಬೊಂಬೆ ಬಾಗಿನ ಏನು ಅಂತ ಅಮ್ಮನನ್ನು ಕೇಳಲು ಅಡಿಗೆ ಮನೆಗೆ ಹೋದಳು. ಮೈಸೂರು ದಸರಾಗೆ ಹೋಗಿದ್ದಾಗ ಅಪ್ಪ ತೆಗೆಸಿಕೊಟ್ಟಿದ್ದ ಕೀ ಕೊಟ್ಟರೆ ಕಂಬಿಯ ಮೇಲೆ ಕೆಳಗೆ ಜಾರುವ ಕೋತಿ- ಅದನ್ನು ನೋಡಿ ಚಿಕ್ಕಕ್ಕ ಕೋತಿ ಕೈಯಲ್ಲಿ ಕೋತಿ ಅಂತ ನಕ್ಕಿದ್ದು- ಅಪ್ಪನ ಆಫೀಸಿನ ಎಲ್ಲಾ ವಾಹನಗಳನ್ನು ಕಣದಲ್ಲಿ ನಿಲ್ಲಿಸಿ ಪೂಜೆ ಮಾಡಿದ ನಂತರ ಊರಿನ ಎಲ್ಲಾ ಮಕ್ಕಳು ಅದರಲ್ಲಿ ಕುಳಿತು ಹೋ ಎಂದು ಕಿರುಚುತ್ತಾ ಸುತ್ತಮುತ್ತಲಿನ ಊರುಗಳಿಗೆ ರೌಂಡ್ ಹೋಗುತ್ತಿದ್ದುದು. ವಿಜಯದಶಮಿಯ ಮಾರನೇ ದಿನ ಪೇಪರ್ ನಲ್ಲಿ ಬರುತ್ತಿದ್ದ ಅಂಬಾರಿ ಮತ್ತು ಇತರ ದೃಶ್ಯಗಳು.- “ಅಜ್ಜಿ ಆ ಕಡೆ ಅಜ್ಜಿ ಆ ಕಡೆ“ ಮೊಮ್ಮಗನ ದನಿ ಕೇಳಿ ರತ್ನ ನೆನಪಿನ ಮೆರವಣಿಗೆಯಿಂದ ಹೊರ ಬಂದಳು. ಮಗಳು ವಿಡಿಯೋ ಕಾಲ್ ಮಾಡಿದ್ದಳು. ಉಷಾ ರಮೇಶ್

Wednesday, June 29, 2022

ನಾನು ಅಮ್ಮನಾಗಲೇ ಇಲ್ಲ ನೀನು ಹುಟ್ಟಿದಾಗ ನೀನು ದೇವರು ನನಗೆ ಕೊಟ್ಟ ವರಪ್ರಸಾದವಾದೆ ನಾನು ಭಕ್ತಳಾಗಿ ಸ್ವೀಕರಿಸಿದೆ. ನಾನು ಅಮ್ಮನಾಗಲೇ ಇಲ್ಲ ನಂತರ ನೀನು ನನಗೆ ಸಿಕ್ಕ ಅಪರೂಪದ ಆಟಿಕೆಯಾದೆ ನನ್ನ ಮನರಂಜನೆಯ ಸಾಧನವಾದೆ. ನಾನು ಅಮ್ಮನಾಗಲೇ ಇಲ್ಲ. ನೀನು ಬೆಳೆದ ಹಾಗೆ ನಾನು ನಿನ್ನ ಶಿಕ್ಷಕಿಯಾದೆ ನೀನು ಗುರುವನ್ನು ಮೀರಿಸುವ ಶಿಷ್ಯನಾದೆ ನಾನು ಅಮ್ಮನಾಗಲೇ ಇಲ್ಲ. ದಿನ ಕಳೆದಂತೆ ನಾನು ಬೆಂಬಲ ಬೇಡುವ ಅಸಹಾಯಕಳಾದೆ ನೀನು ಆರೈಕೆ ಮಾಡುವ ತಾಯಿಯಾದೆ ನಾನು ಅಮ್ಮನಾಗಲೇ ಇಲ್ಲ. ಈಗ ನಾನು ಅದು ಬೇಕು ಇದು ಬೇಕು ಎಂದು ಬೇಡುವ ಮಗುವಾದೆ ನೀನು ಎಲ್ಲವನ್ನೂ ಒದಗಿಸುವ ತಂದೆಯಾದೆ. ಕೊನೆಗೂ ನಾನು ಅಮ್ಮನಾಗಲೇ ಇಲ್ಲ.