Sunday, August 2, 2009

ಮಕ್ಕಳು

ಖಲೀಲ್ ಗಿಬ್ರಾನ್ ಕಾಲ ಜನವರಿ ೬ ೧೮೮೩ ---- ಏಪ್ರಿಲ್ ೧೦ ೧೯೩೧ ಲೆಬನೀಸ್ ಅಮೆರಿಕನ್ ಕವಿ, ಲೇಖಕ ಹಾಗೂ ಚಿತ್ರಗಾರ ಸ್ಫೂರ್ತಿಯನ್ನ ಕೊಡುವ ಬರವಣಿಗೆಯ (inspirational fiction) ಮಾದರಿಯಾಗಿರುವ The prophet ಒಂದು ಅತ್ಯುತ್ತಮ ಪುಸ್ತಕ. ಪುಸ್ತಕದಿಂದ----------- ಆಲ್ ಮುಸ್ತಫಾ ದೇವರಿಗೆ ಹಾಗೂ ಆ ನಗರದ ಜನಗಳಿಗೆ ಪ್ರಿಯವಾದ ವ್ಯಕ್ತಿ. ಅವನು ತನ್ನ ಜನ್ಮಸ್ಥಾನಕ್ಕೆ ಹಿಂದಿರುಗಲು ಹೊರಟಾಗ, ಅಗಲಿಕೆಯ ನೋವನ್ನು ಅನುಭವಿಸುವ ಜನರು ವಿವಿಧ ವಿಚಾರಗಳ ಬಗ್ಗೆ ತಿಳಿಸಲು ಕೇಳುತ್ತಾರೆ.ಶ್ರೀಮಂತನೊಬ್ಬ ಕೊಡುವುದರ ಬಗ್ಗೆ ಕೇಳುತ್ತಾನೆ. ಹೋಟೆಲಿನ ಮಾಲೀಕನೊಬ್ಬ ತಿನ್ನುವುದು ಕುಡಿಯುವುದರ ಬಗ್ಗೆ, ರೈತನೊಬ್ಬ ಕೆಲಸದ ಬಗ್ಗೆ, ಮೇಸ್ತ್ರಿ ಮನೆಗಳ ಬಗ್ಗೆ, ನ್ಯಾಯಾಧೀಶ crime and punishment ಬಗ್ಗೆ , ಶಾಂತಿ, ಸುಖ ದುಃಖ ಇನ್ನಿತರ ತಮ್ಮನ್ನು ಕಾಡುವ ವಿಚಾರಗಳ ಬಗ್ಗೆ ಮಾತನಾಡಲು ಹೇಳುತ್ತಾರೆ. ಅವನು ಪ್ರತಿಯೊಂದರ ವಿಚಾರವಾಗಿಯೂ ಹೇಳುತ್ತಾ ಹೋಗುತ್ತಾನೆ. ಆಗ ಪುಟ್ಟಮಗುವನ್ನು ಎದೆಗೊತ್ತಿಕೊಂಡಿದ್ದ ತಾಯಿಯೊಬ್ಬಳು ಮಕ್ಕಳ ಬಗ್ಗೆ ಮಾತನಾಡಲು ಹೇಳುತ್ತಾಳೆ.ಮಕ್ಕಳ ಬಗ್ಗೆ ಅವನಾಡುವ ನುಡಿಗಳು ಪ್ರತಿಯೊಬ್ಬ ತಾಯಿ ತಂದೆಯರು ಹಾಗೂ ಶಿಕ್ಷಕರು ಓದಲೇಬೇಕಾದದ್ದು. ನಿಮ್ಮ ಮಕ್ಕಳು ನಿಮ್ಮವರಲ್ಲ. ಅವರು ಜೀವನದ ಪ್ರತೀಕ್ಷೆಯ ಫಲಗಳು. ಅವರು ನಿಮ್ಮ ಮೂಲಕ ಬರುತ್ತಾರೆ, ನಿಮ್ಮಿಂದಲ್ಲ.ನಿಮ್ಮ ಜೊತೆಗಿದ್ದರೂ ಅವರು ನಿಮ್ಮವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ಕೊಡಬಹುದು. ನಿಮ್ಮ ಆಲೋಚನೆಗಳನ್ನಲ್ಲ.ಯಾಕೆಂದರೆ ಅವರಿಗೆ ತಮ್ಮದೇ ಆದ ಆಲೋಚನೆಳಿರುತ್ತವೆ. ನೀವು ಅವರ ದೇಹಕ್ಕೆ ಆಶ್ರಯದಾತರು, ಅವರಆತ್ಮಕ್ಕಲ್ಲ.ಯಾಕೆಂದರೆ ಅವರ ಆತ್ಮಗಳು ನೀವು ಕನಸಿನಲ್ಲೂ ಭೇಟಿ ಕೊಡಲಾಗದ ನಾಳೆಗಳಲ್ಲಿ ವಾಸಿಸುತ್ತಿರುತ್ತವೆ. ನೀವು ಅವರಂತಾಗಲು ಪ್ರಯತ್ನ ಪಡಬಹುದು. ಆದರೆ ಅವರನ್ನು ನಿಮ್ಮಂತಾಗಿಸಲು ಯತ್ನಿಸದಿರಿ. ಯಾಕೆಂದರೆ ಜೀವನ ಹಿಮ್ಮುಖವಾಗಿ ಚಲಿಸುವುದೂ ಇಲ್ಲ, ನೆನ್ನೆಯೊಂದಿಗೆ ಅಂಟಿಕೊಂದಿರುವುದೂ ಇಲ್ಲ. ನೀವು ಬಿಲ್ಲುಗಳು. ನಿಮ್ಮ ಮೂಲಕ ಆ ಬಿಲ್ಲುಗಾರ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಕ್ಕಳು. ನಾಳಿನ ಹಾದಿಯಲ್ಲಿ ಗುರಿಯಿಟ್ಟು, ನಿಮ್ಮನ್ನು ತನ್ನ ಅಪಾರ ಶಕ್ತಿಯಿಂದ ಬಗ್ಗಿಸಿ, ಆ ಬಿಲ್ಲುಗಾರ ಬಾಣಗಳು ವೇಗವಾಗಿ ಅತಿ ದೂರದ ಗುರಿ ತಲುಪುವಂತೆ ಮಾಡುತ್ತಾನೆ. ಆ ಬಿಲ್ಲುಗಾರನ ಕೈಯಲ್ಲೇ ಬಗ್ಗಿದ್ದರಲ್ಲೇ ನಿಮ್ಮ ಸಾರ್ಥಕ್ಯವಿದೆ. ಯಾಕೆಂದರೆ ಆ ಬಿಲ್ಗಾರ ಚಲಿಸುವ ಬಾಣಗಳನ್ನು ಪ್ರೀತಿಸುವಂತೆಯೇ ಅಚಲವಾದ ಬಿಲ್ಲನ್ನೂ ಸಹ ಪ್ರೀತಿಸುತ್ತಾನೆ. ಅನುವಾದದಲ್ಲಿ ನನ್ನ ಮೊದಲ ಪ್ರಯತ್ನ. ನಿಮ್ಮ ಅಭಿಪ್ರಾಯ ತಿಳಿಸಿ. ಇದನ್ನು ಓದಿ ಯಾರಿಗಾದರೂ ಮೂಲ ಪುಸ್ತಕ ಓದಬೇಕೆನಿಸಿದರೆ ನನ್ನ ಪ್ರಯತ್ನ ಸಾರ್ಥಕ.

ನೆನಪಿನ ಜಾತ್ರೆ

ಇವತ್ತು friendship day. ನನ್ನ ಮಗ friendship band ತಂದು ಅವನ ಗೆಳೆಯ ಗೆಳತಿಯರಿಗೆಲ್ಲಾ ಕಟ್ಟಿ ಸಂಭ್ರಮ ಪದುತ್ತಿದ್ದಾಗ ನನ್ನ ಮನ ಬಾಲ್ಯಕ್ಕೆ ಓಡಿತು. ನನ್ನ ಮೊದಲ ಗೆಳತಿ ದೇವಿಯ ನೆನಪಾಯಿತು. ಅವಳು ನನಗಿಂತಾ ದೊಡ್ಡವಳು. ಒಂಥರಾ ನನ್ನ gaurdian angel. ಶಾಲೆಯಲ್ಲಿ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದೆ. ಅವಳು ಊರು ಬಿಟ್ಟು ಹೋದದ್ದೇ ನನ್ನ ಮೊದಲ ಅಗಲಿಕೆಯ ಅನುಭವ. ಅಳುತ್ತಾ ನಿಂತಿದ್ದ ನನಗೆ ಅವಳಿಗೆಂದು ಇಟ್ಟುಕೊಂಡಿದ್ದ ಪೂರ್ಣ ಕಳಿತ ಬಾಳೆಹಣ್ಣು ಕೊಟ್ಟು ಸಮಾಧಾನ ಮಾಡಿದ ನೆನಪು ಸದಾ ಹಸಿರು.ಹೆಸರಿಗೆ ತಕ್ಕಂತೆ ತುಂಬುಗೂದಲಿನ ಕೃಷ್ಣವೇಣಿ, ಅಕ್ಕನಿಗೆ ಹೆದರಿ (ಅವರಕ್ಕ ನಮ್ಮಕ್ಕ ಠೂ ಬಿಟ್ಟಿದ್ದರು) ಒಮ್ಮೊಮ್ಮೆ ಮಾತ್ರ ಆಡಲು ಬರುತ್ತಿದ್ದ ಕಲಾ ಗಾಳಿಪಟ ಮಾದಿಕೊಡುತ್ತಿದ್ದ ಮಲ್ಲೇಶ, ಜೊತೆಯಲ್ಲಿ ಆನೇಕಲ್ಲು ಆಡುತ್ತಿದ್ದ ಸಲ್ಮಾ, ಶಾಲೆಯಲ್ಲಿ ರ್ಯಾಂಕ್ ಗೆ ಪೈಪೋಟಿ ಮಾಡುತ್ತಿದ್ದ ಆನಂದ , ನಾಗರಾಜ, ಜಾರುಬಂಡೆಯಿಂದ ಬೀಳಿಸಿದ ನಂದ, ಕುಂಟೆಬಿಲ್ಲೆಯಲ್ಲಿ ಸದಾ ಸೋಲುತ್ತಿದ್ದ ವಿಜಿ, ಪಾರ್ವತಿ ಎಷ್ಟೊಂದು ಗೆಳೆಯರು ಎಷ್ಟೊಂದು ನೆನಪುಗಳು. ನನ್ನ ಬಾಲ್ಯವನ್ನು ಚಿರಸ್ಮರಣೀಯವಾಗಿ ಮಾಡಿದ ಈ ಎಲ್ಲ ಗೆಳೆಯರಿಗೆ ನನ್ನ ಧನ್ಯವಾದಗಳು. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.